Anil Kumble


ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ 


ನಮ್ಮ, ಕುಂಬ್ಳೆ ಅವರು ಹುಟ್ಟಿದ ದಿನ ಅಕ್ಟೋಬರ್ 17, 1970. ಕುಂಬ್ಳೆ ಎಂದರೆ ಅದೆಂತದ್ದೋ ರೋಮಾಂಚನ. ಬಾಲ್ ಹಿಡಿದು ಜಿಂಕೆಯಂತೆ ಚಿಮ್ಮುವ ಅವರ ಬೌಲಿಂಗ್ ವೈಖರಿಯನ್ನು ನೋಡುವುದೇ ಒಂದು ಸೊಗಸು. ಬ್ಯಾಟಿಂಗ್ನಲ್ಲಿ ಕೂಡ ಭಾರತದ ಏಳು ವಿಕೆಟ್ ಪತನವಾಗಿದ್ದರೂ, ಇನ್ನೂ ಕುಂಬ್ಳೆ ಇದ್ದಾರೆ ನೋಡೋಣ ಇರಿ, ಎಂಬಷ್ಟು ಭರವಸೆ ಹುಟ್ಟಿಸುತ್ತಿದ್ದ ಆಟಗಾರ. ಕಳೆದ ಇಂಗ್ಲೆಂಡ್ ಸರಣಿಗೆ ಮುಂಚಿತವಾಗಿ, ಭಾರತ ವಿಶ್ವ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಸ್ಥಾನದಲ್ಲಿ ಅಲಂಕೃತವಾಗಿತ್ತು ಎಂದರೆ, ಕುಂಬ್ಳೆ ಅಂತಹ ಬೌಲರ್ ಕಳೆದ ಎರಡು ದಶಕಗಳಲ್ಲಿ ನೀಡಿದ ಅಮೋಘ ಕೊಡುಗೆ ಕೂಡ ಅದಕ್ಕೆ ಉತ್ತಮ ಬುನಾದಿ ಹಾಕಿದೆ ಎಂಬುದು ಎಲ್ಲ ಕ್ರೀಡಾಭಿಮಾನಿಗಳೂ ಒಪ್ಪುವ ವಿಷಯ. ಕಳೆದ ಇಂಗ್ಲೆಂಡ್ ಸರಣಿಯಲ್ಲಿ ಸೋತು ಸುಣ್ಣವಾದ ಬಾರತ ತಂಡ, ಕುಂಬ್ಳೆ ಅಂಥಹ ಬೌಲರ್ ನಮ್ಮಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ನಿರೂಪಿಸಿದ ನೈಜ ಸ್ಥಿತಿ ಕೂಡಾ ಹೌದು. 

ಅಂದಿನ ದಿನದಲ್ಲಿ ಭಾರತದ ಪ್ರಮುಖ ಸ್ಪಿನ್ನರುಗಳೆಲ್ಲ ನಿವೃತ್ತಿ ಹೊಂದಿದಾಗ, ಅಂದಿನ ದಿನದಲ್ಲಿ ಆಯ್ಕೆದಾರರಾದ ರಾಜ್ ಸಿಂಗ್ ದುರ್ಗಾಪುರ್ ಅವರು ಆಶ್ಚರ್ಯವೋ ಎಂಬಂತೆ ಅನಿಲ್ ಕುಂಬ್ಳೆ ಅವರನ್ನು ಶ್ರೀಲಂಕಾ ವಿರುದ್ಧದ ಏಕ ದಿನ ಪಂದ್ಯ ಮತ್ತು ಇಂಗ್ಲೆಂಡ್ ಪ್ರವಾಸದ ಟೆಸ್ಟ್ ತಂಡಕ್ಕೆ ಹೆಸರಿಸಿದ್ದರು. ಅಂದಿನ ಆ ಆಯ್ಕೆಯನ್ನು ಅತ್ಯಂತ ಸಮರ್ಥವಾಗಿ ಕಾಯ್ದುಕೊಂಡು ಬಂದ ಕುಂಬ್ಳೆ ಅವರು, ನಂತರ ತಾವಾಗಿಯೇ ಕಳೆದೆರಡು ವರ್ಷದ ಹಿಂದೆ ನಿವೃತ್ತಿ ಘೋಷಿಸುವವರೆಗೆ ಹಿಂದಿರುಗಿ ನೋಡಿದ್ದೇ ಇಲ್ಲ. ಮೊದಲ ಸುತ್ತಿನಲ್ಲಿ ಸೋತು ಸುಣ್ಣವಾಗಿದ್ದ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡವನ್ನು ತಮ್ಮ ಸತ್ವಶಾಲಿ ನಾಯಕತ್ವ ಮತ್ತು ಬೌಲಿಂಗ್ನಿಂದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಫೈನಲ್ ವರೆಗೆ ತಂದು ಪ್ರತಿಷ್ಟಿತ ತಂಡವನ್ನಾಗಿ ಮುನ್ನಡೆಸಿದವರು ಕೂಡಾ ಕುಂಬ್ಳೆ ಅವರೇ. ಮುಂದೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಕುಂಬ್ಳೆ ಮಾರ್ಗದರ್ಶಕರು ಎಂದು ಮಲ್ಯ ಹೆಸರಿಸಿದರು. ಆದರೆ, ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಇಲ್ಲದಿರುವ ರಾಯಲ್ ಚಾಲೆಂಜರ್ಸ್ ತಂಡ ಮುಂದೆ ಅದೇನೇ ಸಾಧನೆ ಮಾಡಿದ್ದರೂ ಅದು ವಿಜಯ್ ಮಲ್ಯ ಅವರ ಒಂದು ವ್ಯವಹಾರದಂತಿದೆಯೇ ವಿನಹ ಕರ್ನಾಟಕದ ತಂಡ ಎಂಬ ಭಾವ ಮೂಡಿಸುತ್ತಿಲ್ಲ. ಈಗ ಅನಿಲ್ ಕುಂಬ್ಳೆ ಅವರು ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನು ನಡೆಸುವ ಜವಾಬ್ಧಾರಿಯನ್ನು ಜನಪ್ರಿಯ ಬಹುಮತದಿಂದ ಗಳಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಅಧಿಕಾರಶಾಹಿಗಳ ಕೈಗೆ ಸಿಲುಕಿದ್ದ ಕ್ರಿಕೆಟ್ ಸಂಸ್ಥೆ, ಕ್ರಿಕೆಟ್ ಪ್ರೇಮಿ ಮತ್ತು ಕ್ರಿಕೆಟ್ ಬಲ್ಲ ಒಬ್ಬ ಮೇಧಾವಿಯನ್ನು ಅಧ್ಯಕ್ಷನಾಗಿ ಪಡೆದಿರುವುದಕ್ಕೆ ಇಡೀ ಕನ್ನಡ ನಾಡೇ ಸಂಭ್ರಮ ಪಟ್ಟಿದೆ. ಕುಂಬ್ಳೆ ಜೊತೆಗೆ ವೆಂಕಟೇಶ್ ಪ್ರಸಾದ್ ಮತ್ತು ಜಾವಗಲ್ ಶ್ರೀನಾಥ್ ಸಹಾ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಾಗಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಸದಸ್ಯನಾಗಿ ಕುಂಬ್ಳೆ ಅವರು ತೋರಿದ ಸಾಹಸಗಳು ಅಪೂರ್ವವಾದದ್ದು. ದವಡೆ ಮುರಿದು ಪೂರ್ತಿ ತಲೆಗೆ ಬ್ಯಾಂಡೇಜ್ ಕಟ್ಟಿದ್ದಾಗ ಕೂಡ ತಂಡಕ್ಕಾಗಿ ಅಪೂರ್ವ ಬೌಲಿಂಗ್ ಮೆರೆದ ಕುಂಬ್ಳೆ ಅವರ ಕೆಚ್ಚೆದೆ ಅನನ್ಯ. ವಿಶ್ವದ ಬ್ಯಾಟಿಂಗ್ ಸಾರ್ವಭೌಮ ಸಚಿನ್ ತೆಂಡೂಲ್ಕರ್ ಅವರಿಗೆ ಕುಂಬ್ಳೆ ಎಂದರೆ ಅಪಾರ ಪ್ರೀತಿ ಮತ್ತು ಗೌರವ. ಅಂತೆಯೇ ಭಾರತದ ಎಲ್ಲ ಕ್ರಿಕೆಟ್ಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಕುಂಬ್ಳೆ ಎಂಬುದು ಆತ್ಮ ವಿಶ್ವಾಸ ಮತ್ತು ಉತ್ಕೃಷ್ಟ ಕ್ರೀಡಾಭಿಮಾನಗಳ ಸಂಖೇತ.ಕುಂಬ್ಳೆ ಲೆಗ್ ಸ್ಪಿನ್ನರ್. ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಸುಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿತ್ತು. ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, 619 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ.

 ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕುಂಬ್ಳೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ 25, 1990ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರುಭಾರತ 1992ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದಾಗ ಕುಂಬ್ಳೆ ತಮ್ಮ ಗುಣಮಟ್ಟವನ್ನು ಸ್ಥಾಪಿಸಿ, 2ನೇ ಟೆಸ್ಟ್ನಲ್ಲಿ 8 ವಿಕೆಟ್‌ಗಳನ್ನು ಉರುಳಿಸಿದರು. ಅದೇ ವರ್ಷ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಬಂದಾಗ, ಕೇವಲ 3 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಸರಾಸರಿ 19.8 ರನ್ನುಗಳಲ್ಲಿ ತೆಗೆದುಕೊಂಡರು. ಇವರು ಮೊದಲ 50 ವಿಕೆಟ್‌ಗಳನ್ನು ಕೇವಲ 10 ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು. ಕುಂಬ್ಳೆ ಇಂಥಹ ಸಾಧನೆಯನ್ನು ಮಾಡಿದ ಭಾರತದ ಏಕೈಕ ಬೌಲರ್‌ ಆಗಿದ್ದಾರೆ. ಎರಪಳ್ಳಿ ಪ್ರಸನ್ನರವರಾದ ಮೇಲೆ 100 ಟೆಸ್ಟ್ ವಿಕೆಟ್‌ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಕುಂಬ್ಳೆ. ಇವರು ಇದನ್ನು ಸಾಧಿಸಿದ್ದು 21 ಪಂದ್ಯಗಳಲ್ಲಿ (ಕರ್ನಾಟಕದವರೇ ಆದ ಪ್ರಸನ್ನ ಅವರು ಈ ಸಾಧನೆಯನ್ನು ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ಮಾಡಿದ್ದರು). ಒಂದು ದಿನದ ಪಂದ್ಯಗಳಲ್ಲಿ, ಕುಂಬ್ಳೆ ಅವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ 27, 1933 ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಇವರು ಕೇವಲ 12 ರನ್‌ಗಳಿಗೆ 6 ವಿಕೆಟ್‌ಗಳನ್ನು ಉರುಳಿಸಿದರು. ಈ ದಾಖಲೆ ಭಾರತದ ಯಾವುದೇ ಬೌಲರ್‌ನ ಅತ್ಯುತ್ತಮ ಸಾಧನೆಯಾಗಿದ್ದು, ಇಷ್ಟು ವರ್ಷಗಳಿಂದಲೂ ಇದು ಖಾಯಂ ದಾಖಲೆಯಾಗಿ ಯಾರಿಂದಲೂ ಭೇದಿಸಲ್ಪಡದೆ ಉಳಿದಿದೆ.ವರ್ಷವಾರು ನೋಡಿದಲ್ಲಿ, ಕುಂಬ್ಳೆ ಆವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು 1996ರಲ್ಲಿ. ಈ ವರ್ಷದಲ್ಲಿ ಇವರು 61 ವಿಕೆಟ್‌ಗಳನ್ನು 20.24 ಸರಾಸರಿಯಲ್ಲಿ ಉರುಳಿಸಿದರು.

ಒಟ್ಟಾರೆಯಾಗಿ ಅಂತರ ರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಕುಂಬ್ಳೆ 337 ವಿಕೆಟ್ ಪಡೆದಿದ್ದಾರೆ.ಬ್ಯಾಟಿಂಗ್ನಲ್ಲಿ ಕೂಡ ಹಲವಾರು ಮಹತ್ವದ ಪಾತ್ರ ವಹಿಸಿದ್ದ ಕುಂಬ್ಳೆ ಅವರು ಕೆಲವೊಂದು ನಿರ್ಣಾಯಕ ಗೆಲುವುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಒಂದರಲ್ಲಿ ಶತಕ ಕೂಡ ಗಳಿಸಿ ತಾವೆಷ್ಟು ಸಾಮರ್ಥ್ಯಶಾಲಿ ಎಂಬುದನ್ನು ಕುಂಬ್ಳೆ ಕ್ರಿಕೆಟ್ ಪಂಡಿತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್. ಈ ಸಾಧನೆಯನ್ನು ಕುಂಬ್ಳೆ ಫೆಬ್ರವರಿ 4ರಿಂದ ಫೆಬ್ರವರಿ 8, 1999ರಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿರುವ ಎಂ.ಜಿ.ರಸ್ತೆಯಲ್ಲಿನ ವೃತ್ತಕ್ಕೆ, ಅನಿಲ್ ಕುಂಬ್ಳೆ ವೃತ್ತ ಎಂದು ನಾಮಕರಣ ಮಾಡಲಾಗಿದೆ.ಭಾರತದಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿರುವ ಬೌಲರ್ ಆದ ಅನಿಲ್ ಕುಂಬ್ಳೆ ಅವರು, 619 ವಿಕೆಟ್ ಗಳಿಸಿ ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪೈಕಿ ಮೂರನೆಯವರು.ಅನಿಲ್ ಕುಂಬ್ಳೆ ‘ಜಂಭೋ’ ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಸಾಮರ್ಥ್ಯವನ್ನು ‘ಜಂಬೋ ಜೆಟ್’ ಗೆ ಹೋಲಿಸಿ, ಇವರನ್ನು ಜಂಬೋ ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್ ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.1996ರಲ್ಲಿ ವಿಸ್ಡನ್ ವರ್ಷದ ಶ್ರೇಷ್ಠ ಕ್ರಿಕೆಟ್ಟಿಗ ಎಂಬ ಗೌರವ ಪಡೆದುದರ ಜೊತೆಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕುಂಬ್ಳೆ ಪಡೆದಿದ್ದಾರೆ.

ಮೊನ್ನೆ ಮೊನ್ನೆ ಅವರಿಗೆ ತಮ್ಮ ತಾತನವರ ಹುಟ್ಟೂರಾದ ಕುಂಬ್ಳೆಯಲ್ಲಿ ಸನ್ಮಾನವೂ ನಡೆಯಿತು.. ತುಂಬು ಪ್ರೀತಿಯಲ್ಲಿ ಬಂದು ಮಾತನಾಡಿದ್ದರು.

ಕ್ರಿಕೆಟ್ ಮಾತ್ರವಲ್ಲದೆ Photography ಕೂಡ ಇವರ ನೆಚ್ಹ್ಚಿನ ಹವ್ಯಾಸ. ಇವರೊಬ್ಬ ಒಳ್ಳೆಯ wild life photographer ಸಹಾ ಹೌದು:):)


"ಇಂತಹ ಮಹಾನ್ ಆಟಗಾರ ನಮ್ಮ ಕನ್ನಡಿಗ ಎಂಬ ಹೆಮ್ಮೆ ಸಂತೋಷ ನಮ್ಮದಲ್ಲವೆ!" ಕುಂಬ್ಳೆ ಸಾರ್ ನಿಮಗೆ ನಮ್ಮ ಆತ್ಮೀಯ ನಮನಗಳು ಮತ್ತು ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.

Comments