ಲಾಲ್ ಬಹದ್ದೂರ್ ಶಾಸ್ತ್ರಿ ನೆನಪು


ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನ ಮಂತ್ರಿಗಳಾಗಿದ್ದ ಸಂಧರ್ಭದಲ್ಲಿ ಒಮ್ಮೆ ಒಂದು ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದು ಮಾಡಬೇಕಾದ ಅನಿವಾರ್ಯ ಉಂಟಾಯಿತು. ಆ ರಾಜ್ಯದ ಮುಖ್ಯಮಂತ್ರಿ ಶಾಸ್ತ್ರೀಜಿಯವರಿಗೆ ದೂರವಾಣಿ ಕರೆ ಮಾಡಿ, “ಶಾಸ್ತ್ರೀಜಿ ದಯವಿಟ್ಟು ಕಾರ್ಯಕ್ರಮವನ್ನು ರದ್ದು ಮಾಡಬೇಡಿ. I have made first class arrangements for your visit”. ಶಾಸ್ತ್ರೀಜಿ, ಅಷ್ಟೇ ನಯವಾಗಿ ಹೇಳಿದರು, “why did you do first class arrangements for a third class man”. ಶಾಸ್ತ್ರೀಜಿ ಅವರು ಉನ್ನತ ಸ್ಥಾನದಲ್ಲಿದ್ದರೂ ಆ ಸ್ಥಾನದ ಬಗ್ಗೆ ಒಂದಿಷ್ಟೂ ಅಹಂಕಾರ ವ್ಯಾಮೊಹಗಳನ್ನು ಹೊಂದಿರಲಿಲ್ಲ.

ಮತ್ತೊಂದು ಘಟನೆ, ಶಾಸ್ತ್ರೀಜಿಯವರು ಅಸು ನೀಗಿದ ವಾರ್ತೆ ತಿಳಿದು ಅವರ ಅಂತಿಮ ದರ್ಶನ ಪಡೆಯಲು ಜನರ ನೂಕು ನುಗ್ಗಲು ಉಂಟಾಗಿ , ಪ್ರಧಾನಿ ನಿವಾಸದ ಮುಂದೆ ನಿಯಂತ್ರಿಸಲು ಅಸಾಧ್ಯ ಸ್ಥಿತಿ ತಲುಪಿತ್ತು. ಶಾಸ್ತ್ರೀಜಿ ಅವರ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ವರ್ ಪ್ರಸಾದ್ ಅವರು ಕಾವಲಗಾರನನ್ನು ಕರೆದು ಏನಾದರೂ ತ್ವರಿತವಾಗಿ ಮಾಡು ಎಂದರು. ಆ ಕಾವಲುಗಾರ ಉತ್ತರಿಸಿದನಂತೆ. “ಸಾರ್ ಕ್ಷಮಿಸಿ, ಈ ಜನರು ಈ ಸತ್ತ ಮಹಾನು ಭಾವನಂತಲ್ಲ! ಶಾಸ್ತ್ರೀಜಿಯವರಾದರೋ ನನಂತವ ಕೂಡ ಏನಾದರೂ ಹೇಳಿದ್ದರೂ ಶಿಸ್ತಿನಿಂದ ಪಾಲಿಸುತ್ತಿದ್ದರು ಎಂಬ ಖಚಿತವಾದ ನಂಬಿಕೆ ನನಗಿದೆ. ಆದರೆ ಈ ಜನರಾದರೋ ಶಾಸ್ತ್ರೀಜಿಯಂತವರಲ್ಲ.” ರಾಜೇಶ್ವರ ಪ್ರಸಾದ್ ಅವರು ಹೇಳುತ್ತಾರೆ, “ಇದು ಶಾಸ್ತ್ರೀಜಿ ಅವರ ಬಗ್ಗೆ ಇರುವ ಅತ್ಯಂತ ಹಿರಿಯ ಗೌರವಯುತ ವ್ಯಾಖ್ಯಾನ” ಎಂದು.


ಇಂತಹ ಮಹಾನುಭಾವ ನಮ್ಮ ಪ್ರಧಾನಿ ಆಗಿದ್ದರು ಎಂಬ ಹೆಮ್ಮೆ ನಮ್ಮದು.

ಆಧಾರ: ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಗಳಾಗಿದ್ದಾಗ ಅವರ ಪ್ರಧಾನ ಕಾರ್ಯದರ್ಶಿಗಳಾಗಿದ್ದ ರಾಜೇಶ್ವರ ಪ್ರಸಾದ್ ಅವರು ಬರೆದಿರುವ “Days with Lal Bahadur Shastri” From: ಕನ್ನಡ ಸಂಪದ

Comments